ನೀ ಬಂದದ್ದರಿವಾಗಲಿಲ್ಲ…

ನೀ ಬಂದದ್ದರಿವಾಗಲಿಲ್ಲ
ಅರಿವಾಗಲಿಲ್ಲವೋ ಹರಿಯೇ
ನೀ ಬಂದಾಗಾ.
ನೀ ಬಂದದ್ದರಿವಾಗಲಿಲ್ಲ

ಶಿಶುವಾಗಿರೇ ಬಂದೆ ನೀನೇಯೇ ನಾನೆಂದೆ
ನನ್ನೋಳಗಣ ನಿನ್ನ ನಾನಾಗ ಕಾಣಲಿಲ್ಲ
ವಟು ನಾನಾದಾಗ ದಿಟದಲಿ ನೀನಿದ್ದೆ
ನಿನ್ನಾಟಪಾಟವು ನನ್ನೋಟಕ್ಕಿಳಿಯಲಿಲ್ಲ
ನೀ ಬಂದದ್ದರಿವಾಗಲಿಲ್ಲ

ಕೌಮಾರ್ಯದೀ ನೀನು ಮಾರನ ಮರೆ ನಿಂದೆ
ಮರೆತೆನೆಂದೆನಿತೂ ನಾನಾಗ ಮರುಗಲಿಲ್ಲ
ಮನೆ ಮಡದಿ ಮಕ್ಕಳಾ ದೋಣಿಯಾ ಕಟ್ಟಲೊರಟೆ
ತುಂಬಿದಾ ಸಾಗರ ಕಂಡೊಟ್ಟಾರೆ ನಿನ್ನ ಮರೆತೆ
ನೀ ಬಂದದ್ದರಿವಾಗಲಿಲ್ಲ

ಭಂಗುರವಾದಂತ ಬಂಧನ ಬಿಡಲಿಲ್ಲ
ರಂಗಾ ನೀ ಕರೆದಾರೂ ಸಂಗಕ್ಕೆ ಬರಲಿಲ್ಲ
ಮೈ ಮನ ಮುದುಡಲು ನಿನ್ನರಿವಾಯಿತಲ್ಲ
ಅರಿವಾದರೇನೋ ಹರಿಯೇ
ಭವದಾ ಋಣ ಮುಗಿಯೀತಲ್ಲ

14-05-2011

Author: GurupadaBelur

ಹೆಸರು: ಗುರುಪಾದಸ್ವಾಮಿ. ಊರು ಬೇಲೂರು. ಬರವಣಿಗೆಗಾಗಿ ಇಟ್ಟುಕೊಂಡ ಹೆಸರು ಗುರುಪಾದಬೇಲೂರು. ಬರೆದಿದ್ದು ಸ್ವಲ್ಪ. ಬರೆಯಬೇಕೆಂಬ ತುಡಿತ. ಅನಿಸಿದ್ದನ್ನು ಹಂಚಿಕೊಳ್ಳಲು ಈ ವೇದಿಕೆ ಸೂಕ್ತ ಎನಿಸಿ ಇದನ್ನು ಆರಿಸಿಕೊಂಡಿದ್ದೇನೆ. ಸಹೃದಯರ ಒಡನಾಟ ಹಾಲಿನ ಮಳೆ, ಜೇನಿನ ಸವಿಯಾಗುವಂತೆ ಆಗಲಿ ಎಂಬ ಆಶಯದೊಂದಿಗೆ ಬಂದಿದ್ದೇನೆ. ಈ website ಗೆ ಸ್ವಾಗತ. – ಗುರುಪಾದಬೇಲೂರು

Leave a comment

Design a site like this with WordPress.com
Get started