Design a site like this with WordPress.com
Get started

ಕಂತೆ

“ಕಂತೆ”

ಕಥಾ ಸಾಗರದಲ್ಲಿ ಪ್ರತಿಯೊಂದು ಕಥೆಯೂ ಒಂದೊಂದು ಅಲೆಗಳಿದ್ದಂತೆ. ಸಮುದ್ರ ತನ್ನ ಒಡಲ ನೀರನ್ನು ತುಳುಕಿ ಚೆಲ್ಲುತ್ತದೆಯೇನೋ ಎಂಬಂತೆ ಭೋ‍ರ್ಗರೆಯುತ್ತದೆ. ಅಲೆಗಳ ಅಬ್ಬರದಿಂದ ಉಕ್ಕಿದ ನೀರನ್ನು ಮತ್ತೆ ತನ್ನ ಒಡಲಿಗೆ ತುಂಬಿಸುತ್ತಾ, ಆ ಒಡಲ ಭಾರಕ್ಕೊ ಏನೋ ತೀರಕ್ಕೆ ಬಂದು ಅಪ್ಪಳಿಸುತ್ತಾ,  ತನ್ನಿರವು ತೋರಿಸಲು ಸದ್ದು ಮಾಡುವಂತೆ ಈ ಕಥೆಗಳೂ ಸದಾ ಸದ್ದು ಮಾಡುತ್ತಾ ಸಮಾಜವನ್ನು ಎಚ್ಚರಿಸುತ್ತಿರುತ್ತವೆ.

         ಕಥೆಗಳ ಪ್ರಕಾರವನ್ನು ಓದಬೇಕು ಎನ್ನುವ ತುಡಿತ ಬಂದಾಗಲೆಲ್ಲಾ ನನಗೆ ಬಹಳ ಸಾರಿ ಯಾವ ರೀತಿಯ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ಕಾಡುತ್ತದೆ.  ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ಸಾಹಿತಿಗಳಾದ ಮಾಸ್ತಿರವರು, ಕಾರಂತರು, ಕುವೆಂಪುವರು, ವಿ.ಕೃ.ಗೋಕಾಕ್‌ರವರು, ಕಂಬಾರರು, ಅಡಿಗರು ಇನ್ನು ಅನೇಕರು ಬರೆದಿರುವಂತಹ ಸಾಮಾಜಿಕ ಬದಲಾವಣೆಯ ತಳಹದಿ ಹೊಂದಿದ ಕಥೆಗಳು ಈಗಾಗಲೇ ಜನಮಾನಸದಲ್ಲಿ ಬೇರೂರಿವೆ. ಅನಂತಮೂರ್ತಿ, ಕಾರ್ನಾಡ್‌, ಎಸ್.ಎಲ್.ಭೈರಪ್ಪ, ತೇಜಸ್ವಿ,    ರವರಂತಹ ಹೊಸ ಸಾಮಾಜಿಕ ಕಲ್ಪನೆಯ  ಪ್ರತಿಪಾದಕ ಕಥೆಗಳು ಎಲ್ಲರಿಗೂ ತಲುಪಿವೆ.  ಇನ್ನು ಅನಕೃ, ತ.ರಾ.ಸು, ತ್ರಿವೇಣಿ, ವೈದೇಹಿ ರಂತಹವರು ಬರೆದಿರುವ ಸಾಂಸಾರಿಕ ಜೀವನದ ಚಿತ್ರಣಗಳ ಕಾದಂಬರಿಗಳು ಕುಟುಂಬ, ಸಮಾಜ ದೇಶ, ಪ್ರಕೃತಿ ಇವುಗಳ ಸಮನ್ವಯದೊಂದಿಗೆ ಬದುಕುವ, ಬದುಕಬೇಕಾದ ಬಗೆಯನ್ನು ತಿಳಿಸಿಕೊಡುತ್ತವೆ. ಇವರುಗಳ ಪ್ರಸಿದ್ಧ ಮೌಲಿಕ ಕೃತಿಗಳನ್ನು ಸಮಾಜವು ಈಗಾಗಲೇ ಓದಿದೆ, ಅರಗಿಸಿಕೊಂಡಿದೆ ಮತ್ತು ನೂರಾರು ವೇದಿಕೆಗಳಲ್ಲಿ ಇವರುಗಳ ಆಶಯವನ್ನು ಪುನರುಚ್ಛರಿಸಿ ಮರುನೆನಪಿಗೂ ತರುತ್ತಿರುತ್ತವೆ.

         ಇದೆಲ್ಲದರ ನಂತರ, ಈಗ ಡಾಕ್ಟರ್‌ಗಳು, ಇಂಜಿನಿಯರ್‌ಗಳು, ಐಟಿಬಿಟಿ ಟೆಕ್ಕಿಗಳು ಬಿಡುವಿಲ್ಲದ ವೃತ್ತಿಯಲ್ಲಿದ್ದುಕೊಂಡೂ ಸಹ ಕಥಾಲೋಕಕ್ಕೆ ಪ್ರವೇಶಿಸಿದ್ದು, ನೂತನ ಕಥೆಗಳ ಅವಿಷ್ಕಾರವಾಗುತ್ತಿದೆ. ನಾನೂ ತಾಂತ್ರಿಕತೆಯ ಹಿನ್ನೆಲೆಯಿಂದ ಬಂದವನಾದ್ದರಿಂದ, ವೈಜ್ಞಾನಿಕ ಹಿನ್ನೆಲೆಯ ಕಥೆಗಳನ್ನು ಪೋಣಿಸಲು ಹೆಚ್ಚೆಚ್ಚು ಉತ್ಸುಕನಾಗಿದ್ದೆ. ಹಾಗಾಗಿಯೇ ಮಿಂಚಿನಬಳ್ಳಿ, ಅಗರ್ತ, ಒಡಲಾನಲ, ಫೋರ್ಡಿ ಇತ್ಯಾದಿ ಕಥೆಗಳಲ್ಲಿ ತಾಂತ್ರಿಕತೆಯೇ ಹೆಚ್ಚು ವಿಜೃಂಭಿಸುತ್ತಿತ್ತು. ಮೌಲಿಕ ಸಾಹಿತ್ಯ ಕೊನೆ ಬೆಂಚಿನಲ್ಲಿ ಕೂರುತ್ತಿತ್ತು.  ಬೇರೆ ಬೇರೆ ಕಥಾ ಸಂಗ್ರಹಗಳನ್ನು ಓದಲು ಪ್ರಾರಂಭಿಸಿದ ಮೇಲೆ ಖ್ಯಾತನಾಮರ ಕೆಲವು ಕಥೆಗಳು ಎಷ್ಟು ಮನದಲ್ಲಿ ಬೇರೂರಿ ನಿಂತು ಬಿಡುತ್ತಿದ್ದವು ಎಂದರೆ ಕೆಲವು ದಿನಗಳವರೆಗೆ ಅದೇ ಲೋಕದಲ್ಲಿ ಮಗ್ನನಾಗಿರುವಂತೆ ನನ್ನನ್ನು ಮಾಡಿ ಬಿಡುತ್ತಿದ್ದವು. ಅದಕ್ಕೆ ಕಾರಣ ಆ ಕತೆಗಳಲ್ಲಿದ್ದ ಮೌಲಿಕ ಸಾಹಿತ್ಯ. ಬರಿಯ ಪದಗಳ ಪೋಣಿಸುವುದಕ್ಕೆ ಸೀಮಿತವಾದ ಕಥೆಗಳಲ್ಲ ಅವುಗಳು. ಅಲ್ಲಿ ಪ್ರತಿ ಪದವನ್ನು ಪೋಷಿಸಲಾಗಿತ್ತು. ಒಂದು ವಾಕ್ಯದಲ್ಲಿ ಕಥೆಗಾರನಿಗೆ ತನ್ನ ಆಶಯವನ್ನು ಸಮರ್ಥವಾಗಿ ಬಿಂಬಿಸಬಲ್ಲ ಸಾಮರ್ಥ್ಯವಿತ್ತು.

ಕಥೆಗಳನ್ನು ಏಕೆ ಬರೆಯಬೇಕು: ಕಥೆಗಳನ್ನು ಏಕೆ ಓದಬೇಕು ಎಂಬ ಮೂಲಭೂತ ಅನುಮಾನದೊಂದಿಗೆ ಹಳೆಯ ತಲೆಮಾರಿನ ಮತ್ತು ಈಗಿನ ಈ ಕಥೆಗಳನ್ನು ಓದ ತೊಡಗಿದೆ. ನವ್ಯ ಕಥೆಗಳಲ್ಲಿ ಅಂತಹ ಪದ ಪೋಷಣೆಯನ್ನು ಹುಡುಕುವ ಆಸೆ. ಕಥೆಯೊಂದು ಕಾವ್ಯವಾಗುವ ಬಗೆಯನ್ನು ನೋಡುವ ಕುತೂಹಲ.

         ಅಂತಹ ಕೃತಿಗಳ ಮುತ್ತಿನ ಹಾರ ಮಾಡುವ ತವಕ. ನಮ್ಮ ಓದುಗರಿಗೆ ಅವುಗಳನ್ನು ಪರಿಚಯಿಸುವ ಆಸೆ. ನಿಮಗೆ ಅಂತಹ ಕಥೆಗಳು ಸಿಕ್ಕರೆ, ನೀವು ಬರೆದಿದ್ದು ನಿಮಗೆ ತೃಪ್ತಿ ತಂದಿದ್ದರೆ ಅಂತಹ ಕಥೆಗಳನ್ನು ನನಗೂ ಕಳಿಸಿ. ಅದನ್ನು ಪರಿಚಯಿಸೋಣ.

ನಾನೆಣಿಸಿದಂತೆ ಇದು ಕಥೆಗಳ ವಿಮರ್ಶೆಯಲ್ಲ. ಸುಂದರ ಕಥೆಗಳ ರಸಸ್ವಾದವನ್ನು ಬಿಡುವಿಲ್ಲದ ಕೆಲಸದ ಮಧ್ಯೆಯೂ ಸಾಹಿತ್ಯದ ಬಗ್ಗೆ ಒಲವು ತೋರುವವರಿಗೆ ಉಣಬಡಿಸುವ ಕೆಲಸ.

ನನ್ನ ಸ್ನೇಹಿತ ಕಂನಾಡಿಗಾರವರು ಜಯಂತ ಕಾಯ್ಕಿಣಿಯವರ “ನೋ ಪ್ರಸೆಂಟ್ಸ್‌ ಪ್ಲೀಸ್”‌ ಪುಸ್ತಕ ಓದಲು ಕೊಟ್ಟಿದ್ದಾರೆ. ನಾರಾಯಣ್‌ ರವರ ಇಹದ ಪರಿಮಳದ ಎರಡನೇ ಓದಿಗಾಗಿ ಇಟ್ಟುಕೊಂಡಿದ್ದೇನೆ. ಆ ಕಥೆಗಳ ಬಗ್ಗೆ ಮುಂದೆ ತಿಳಿಸುತ್ತೇನೆ.

                                                            ಗುರುಪಾದ ಬೇಲೂರು

ನಾಳೆಯನ್ನು ಗೆದ್ದವನು: ಕಥಾ ವಿಮರ್ಶೆ‌ ಲೇಖಕರು: ನಾಗೇಶ್ ಕುಮಾರ್

ಇ ವಿಮರ್ಶೆ: ನಾಳೆಯನ್ನು ಗೆದ್ದವನು

ಲೇಖಕರು: ನಾಗೇಶ್‌ ಕುಮಾರ್.‌ ವೈಜ್ಞಾನಿಕ ಹಾಗೂ ಪತ್ತೇದಾರಿ ಕಾದಂಬರಿಗಳ ಲೇಖಕರು. ಇವರ ನಾಳೆಯನ್ನು ಗೆದ್ದವನು ಎನ್ನುವ ವೈಜ್ಞಾನಿಕ ಹಿನ್ನಲೆಯ ಕಾದಂಬರಿಯು ಇಂಗ್ಲೀಷ್‌ ಆವೃತ್ತಿಯಲ್ಲಿ ‘Time Renewed’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ ಎಂದಿದ್ದಾರೆ. ಅದನ್ನೂ ಒಮ್ಮೆ ಓದಬೇಕು. ಇದೇ ಲೇಖಕರ ಹಿಮಜಾಲ, ಕರಾಳ ಗರ್ಭ ಕಾದಂಬರಿಗಳನ್ನು ಓದುವ ಕುತೂಹಲ ಹೆಚ್ಚಿದೆ. ಅವುಗಳ ವಿಮರ್ಶೆಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುತ್ತೇನೆ.

 ಅನುಪಮಾಳನ್ನು ಭಯೋತ್ಪಾದಕರ ಧಾಳಿಯಲ್ಲಿ ಕಳೆದುಕೊಂಡ ಅಭಿಮನ್ಯು, ಅವಳ ನೆನಪಿನಿಂದ ಹೊರಬರಲಾಗದೆ ಒದ್ದಾಡುತ್ತಿರುತ್ತಾನೆ. ತಾನು ಗುಪ್ತಚಾರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆ ಧಾಳಿಯು ತನ್ನನ್ನೇ ಗುರಿ ಮಾಡಿದ್ದೇ ಇರಬೇಕು ಅದಕ್ಕೆ ಅನುಪಮಾ ಅನ್ಯಾಯವಾಗಿ ಬಲಿಯಾದಳು ಎನ್ನುವ ಕೊರಗು ಅವನನ್ನು ಕಾಡುತ್ತಿರುತ್ತದೆ.ಇಂತಹ ಸಮಯದಲ್ಲಿ ಅನ್ಯಗ್ರಹದ ಗಗನ ನೌಕೆ ಅವನನ್ನು ಕರೆದೊಯ್ಯುತ್ತದೆ. ಅಲ್ಲಿಯ ಸನ್ನಿವೇಶ ಅವನನ್ನು ಗಲಿಬಿಲಿಗೆ ದೂಡುತ್ತದೆ.ಅಲ್ಲಿಂದ ಮುಂದೆ ಕಥೆ ವಿಜ್ಞಾನದ ವಿಸ್ಮಯಗಳಿಗೆ ತೆರೆದುಕೊಳ್ಳುತ್ತಾ ಹೋಗುತ್ತದೆ.

 ಹೆಚ್‌ ಎಂ ಸಿ ಗೆಲಾಕ್ಸಿಯ ಕಾಂಪ್ಲೇಸ್‌ ಗ್ರಹದ ಅತೀ ಬುದ್ದಿವಂತ ಜೀವಿಗಳು ಕಾಸ್ಮಾಸ್‌ ಪೋಲಿಸ್‌ ಆಗಿ ನಮ್ಮ ಭೂಮಿಯನ್ನು ರಕ್ಷಿಸಲು ನಾಯಕನ ಸಹಾಯ ಪಡೆಯುವುದು, ನಾಯಕ ಭಯೋತ್ಪಾದಕರನ್ನು ಅನ್ಯಗ್ರಹವಾಸಿಗಳ ನೆರವಿನಿಂದ ಸದೆಬಡೆಯುವುದು ಸಿನೀಮಿಯವಾಗಿ ಕಾಣುತ್ತದೆ.

ಆದರೆ ವಿಜ್ಞಾನದ ಹಿನ್ನಲೆಯಲ್ಲಿ ಲೇಖಕರು ವಿವರಿಸುವ, ಕಾಲದ, ಕಾಲಯಾನದ, ಭೂತ,ವರ್ತಮಾನ ಮತ್ತು ಭವಿಷ್ಯತ್‌ ಕಾಲದ ನಂಟಿನ  ವಿವರಣೆ ನಮ್ಮನ್ನು ಕಥೆಯೊಂದಿಗೆ ಕಟ್ಟಿಹಾಕುತ್ತದೆ.

ಸೃಷ್ಟಿಯಲ್ಲಿ ಯಾವುದೂ ಕಳೆದು ಹೋಗುವುದಿಲ್ಲ. ರೈಲಿನಲ್ಲಿ ಹೋಗುವಾಗ ನಾವು ಬಿಟ್ಟು ಮುಂದೆ ಹೋದ ಸ್ಟೇಷನ್‌ ಉಳಿದು ಹೋದ ಹಾಗೆ ಭೂತಕಾಲವು ನಮ್ಮ ಜೀವನದ ಆ ಕ್ಷಣದ ಸಾಕ್ಷಿಯಾಗಿ ಉಳಿದುಕೊಳ್ಳುತ್ತದೆ. ನಾವು ಮುಂದೆ ಸಾಗಿದಂತೆ ನಮ್ಮ ಕರ್ಮ ಫಲದ ಅನ್ವಯ ಮುಂದಿನ ಸ್ಟೇಷನ್‌ ತಲುಪುತ್ತೇವೆ. ಅದನ್ನು ನಾವು ತಲುಪಿದಾಗ ಅದು ನಮ್ಮ ವರ್ತಮಾನವಾಗುತ್ತದೆ. ಆ ಭವಿಷ್ಯತ್ತಿನ  ವರ್ತಮಾನವನ್ನು ಬದಲಿಸಿಕೊಳ್ಳಲು ನಾವೇ ಶಕ್ತರಿದ್ದೇವೆ.  ಈ ಸೃಷ್ಟಿಗೆ ನಾವು ಪ್ರೇಕ್ಷಕರು ಆಯಾ ಕಾಲದ ಕಿಂಡಿಯಲ್ಲಿ ಅದರ ದರ್ಶನ ನಮಗಾಗುತ್ತದೆ ಎನ್ನುವಲ್ಲಿ ಆಧ್ಯಾತ್ಮಿಕ ಸಂಕೇತವನ್ನೂ ನೀಡಿರುವಂತಿದೆ.

 ಸಾಪೇಕ್ಷ ಸಿದ್ದಾಂತವನ್ನು ಇಷ್ಟು ಸರಳವಾಗಿ ಹೇಳಬಹುದೆಂದು ಅರಿತಿರಲಿಲ್ಲ. ವೈಜ್ಞಾನಿಕ ಕಥೆಗಳನ್ನು ಬರೆಯುವಲ್ಲಿ ಆಸಕ್ತಿ ಇರುವ ನನಗೆ ಲೇಖಕರು ಈ ವಿಷಯದಲ್ಲಿ ಸೀನೀಯರ್‌ ಆಗಿಬಿಡುತ್ತಾರೆ.

ಹೊಸ ನಾಳೆಗಾಗಿ ಹೊಸ ನಿನ್ನೆಯನ್ನು ಮತ್ತು ಹೊಸ ಇಂದಿನ ದಿನವನ್ನು ಮರು ಸೃಷ್ಟಿ ಮಾಡುವ ಕಲ್ಪನೆ ನಿಜಕ್ಕೂ ಸಾಕಾರವಾಗುವಂತಿದ್ದರೆ ಮಾನವಜನ್ಯ ತಪ್ಪುಗಳೆಲ್ಲವನ್ನೂ ತಿದ್ದಿಕೊಳ್ಳುವ ಅವಕಾಶ ಸಿಕ್ಕಿಬಿಡುತ್ತಿತ್ತು.

ಈ ಕತೆಯನ್ನು ರೋಚಕತೆಗೆ ಮಿತಿಗೊಳಿಸದೆ ಬದುಕಿನ ಆಯಾಮಗಳನ್ನು ವಿಶ್ಲೇಷಿಸುವ ಕೆಲಸವನ್ನೂ ಲೇಖಕರು ಮಾಡಿದ್ದಲ್ಲಿ ಇನ್ನೂ ಅರ್ಥಪೂರ್ಣವಾಗುತ್ತಿತ್ತು. ಅವರಲ್ಲಿ ಆ ಸತ್ವ ಖಂಡಿತವಾಗಿಯೂ ಇದೆ.

ಗುರುಪಾದ ಬೇಲೂರು

ಇಂದಿನ ಓದು “ನಿಗೂಢ ನಾಣ್ಯ”

ವಿಟ್ಟಲ್‌ ಶೆಣೈ ರವರ “ನಿಗೂಢ ನಾಣ್ಯ” ಎನ್ನು ಕಾದಂಬರಿ ಓದಿ ಮುಗಿಸಿದೆ. ಕಾದಂಬರಿಗಳ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವ ಮತ್ತು ಒಂದೇ ಓದಿಗೆ ಓದಿಸಿಕೊಳ್ಳುವ ಕುತೂಹಲಕಾರಿ ವಿವರಣೆ ತುಂಬಿರುವ ಕಥೆ. ಈಗ ಬಹಳವಾಗಿ ಚಾಲ್ತಿಯಲ್ಲಿರುವ‌ ಹೊಸ ಧನ ವಿನಿಮಯದ ಬಿಟ್‌ ಕಾಯಿನ್ ಬಳಕೆಯ ಬಗ್ಗೆ ಬೆಳಕು ಚೆಲ್ಲುವ ಹಾಗೂ ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಬೇಕಾದ ಅಂಶಗಳು ಈ ಕಥೆಯಲ್ಲಿವೆ.ಧನ ಮತ್ತು ಹಣದ ವ್ಯತ್ಯಾಸವನ್ನು ಬಹಳ ಸ್ಪಷ್ಟವಾಗಿ ಹಾಗೂ ಬಹಳ ಸರಳವಾಗಿ ವಿವರಿಸಲಾಗಿದೆ. ಧನ ತನ್ನ ಖರೀದಿಯ ಸಾಮರ್ಥ್ಯ ಹಿಗ್ಗಿಸಿಕೊಂಡರೆ, ಹಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾ ಸಾಗುತ್ತದೆ. ಗೋಲ್ಡ್‌ ಸ್ಟಾಂಡರ್ಡ್‌, ಬ್ರೆಂಟನ್‌ ವುಡ್‌ ಸಿಸ್ಟಮ್‌ , ಡಾಲರ್‌ ಸ್ಟಾಂಡರ್ಡ್‌ ಗಳನ್ನು ವಿವರಿಸುವಾಗ ಕಥೆ ನಿಂತು ಬಿಡುತ್ತದೆ ಎನಿಸಿದರೂ ಅದು ನಮ್ಮನ್ನು ಮುಂದಿನ ಬೆಳವಣಿಗೆಗೆ ತಯಾರು ಮಾಡುತ್ತದೆ. ಡಿಫಿಸಿಟ್‌ ಸ್ಪೆಂಡಿಗ್‌ ಮತ್ತು ಫ್ರಾಕ್ಷನಲ್‌ ರಿಸರ್ವ್‌ ಲೆಂಡಿಂಗ್‌ ಪ್ರಕ್ರಿಯೆಗಳು ನಿಜಕ್ಕೂ ನಮ್ಮನ್ನು ಅಚ್ಚರಿಗೀಡು ಮಾಡುತ್ತವೆ. ಯಾವ ನಶ್ವರ ಸಂಪತ್ತಿಗೋಸ್ಕರ ಯಾರೊಂದಿಗೆ ದಿನನಿತ್ಯ ಹೋರಾಡುತ್ತಿದ್ದೇವೆ, ಅಸ್ತಿತ್ವದಲ್ಲೇ ಇಲ್ಲದ ಮಾಯೆಯ ಹಣಕ್ಕೋಸ್ಕರ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದೇವೆ ಅಲ್ಲವೇ. ಇದರ ಮಧ್ಯೆ, ಅಮಾಯಕರು ಹಣದುಬ್ಬರದ ಹೊಡೆತಕ್ಕೆ ಸಿಲುಕಿ ನಾಶವಾಗುವ ಪರಿ, ನೀ ಮಾಯೆಯೊಳಗೋ ನಿನ್ನೋಳು ಮಾಯೆಯೋ ಎನಿಸಿಬಿಡುತ್ತದೆ. ಸರ್ಕಾರಗಳ, ಬಂಡವಾಳದಾರರ ಈ ನಯವಂಚನೆಯ ಆಟದ ನಿಜಸ್ವರೂಪ ಇಷ್ಟು ವಿಸ್ತೃತವಾಗಿ ಖಂಡಿತವಾಗಿಯೂ ತಿಳಿದಿರಲಿಲ್ಲ. ಬಿಟ್‌ ಕಾಯಿನ್‌ ಎಂಬುದು ಬ್ಲಾಕ್‌ ಚೈನ್‌ ತಂತ್ರಾಂಶ ವಿಶ್ವಾಸ ಮತ್ತು ನಂಬಿಕೆಯನ್ನು ಕಂಪ್ಯೂಟರ್‌ ಭಾಷೆಯ ಮೂಲಕ ಸಂಗ್ರಹ ಮಾಡಿಕೊಳ್ಳುವ ಒಂದು ಮಹಾನ್‌ ಅನ್ವೇಷಣೆ. ಇನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ಈಗಿರುವ ಹಣ ವಿನಿಮಯದ ವ್ಯವಸ್ಥೆ ಬದಲಾಗಿ, ಬಿಟ್‌ ಕಾಯಿನ್‌ ಅಥವಾ ಅದಕ್ಕೂ ಉತ್ತಮ ವ್ಯವಸ್ಥೆ ಬಂದೇ ಬರುತ್ತದೆ. ಇದನ್ನು ಬದಲಿ ಹಣಕ್ಕೆ ಮಾತ್ರವಲ್ಲ, ಭೂ ನೋದಣಿ, ವಾಹನಗಳ ರಿಜಿಸ್ಟ್ರೇಷನ್‌ ಇತ್ಯಾದಿ ವ್ಯವಸ್ಥೆಗಳಿಗೂ ಬಳಸಿಕೊಳ್ಳಬಹುದು ಮತ್ತು ಇದು ಫೂಲ್‌ ಪ್ರೂಫ್‌ ವ್ಯವಸ್ಥೆಯಾಗುತ್ತದೆ ಎಂಬ ಸಾಧ್ಯತೆ ಖುಷಿ ಕೊಡುತ್ತದೆ. ಹೊಸ ತಂತ್ರಜ್ಞಾನದ ಅರಿವು ಮೂಡಿಸುವ ಜೊತೆಗೆ, ನವಿರು ಪ್ರೇಮ ಕಥೆಯನ್ನು ಥಳುಕು ಹಾಕಿರುವುದರಿಂದ ಕಥೆ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಒಂದೇ ಸಿಟ್ಟಿಂಗ್‌ ನಲ್ಲಿ ಮುಗಿಸಬಹುದು. ಇಂತಹ ಚಂದದ ಕಾನ್ಸೆಪ್ಟ್‌ ಅನ್ನು ಸುಂದರವಾಗಿ ಹೆಣೆದುಕೊಟ್ಟ ವಿಟ್ಟಲ್‌ ಶೆಣೈ ರವರಿಗೆ ಧನ್ಯವಾದಗಳು.ಒಮ್ಮೆ ಓದಲೇ ಬೇಕಾದ ಕಾದಂಬರಿ

ಕರೋನ: ನಮಗೆ ಕಲಿಸಿದ್ದೇನು ?

ಇತ್ತೀಚಿನ ದಿನಗಳಲ್ಲಿ ಕರೋನ ವೈರಸ್‌ ನ ಕಾರಣದಿಂದ ನಡೆಯುತ್ತಿರುವ ನಾಗರೀಕ ಜಗತ್ತಿನ ಲಾಕ್‌ ಔಟ್‌ ನಿಂದಾಗಿ, ಪ್ರಕೃತಿಯಲ್ಲಿ ಬಂದಿರುವ ಬದಲಾವಣೆ ಅಚ್ಚರಿ ಮೂಡಿಸುತ್ತಿದೆ. ಊರಿನ ಚನ್ನಕೇಶವ ದೇವಸ್ಥಾನ ಸದಾ ಕಾಲ ಪ್ರವಾಸಿಗರಿಂದ ತುಂಬಿರುತ್ತಿತ್ತು. ಜನರಿಲ್ಲದ ದೇವಸ್ಥಾನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.

Continue reading “ಕರೋನ: ನಮಗೆ ಕಲಿಸಿದ್ದೇನು ?”

MYLANG BOOKS- ಓದಿನಲ್ಲಿ ತರುತ್ತಿದೆ ಹೊಸತನ

ಈ ಭಾನುವಾರ 01-03-2020ರ ಬೆಳಿಗ್ಗೆ 10.30 ಗಂಟೆಗೆ Indian Institute of World cultureನ ಸಭಾಂಗಣದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದ ಬಗ್ಗೆ ಸುಮಾರು ಮೂರು ತಿಂಗಳಿಂದ ಫೇಸ್‍ಬುಕ್‍ನಲ್ಲಿ, ಟ್ವಿಟರ್‍ನಲ್ಲಿ ಮಾತನಾಡಲಾಗುತ್ತಿತ್ತು. ನೆಟ್ಟಿಗರೂ ಕುತೂಹಲದಿಂದ ಎದುರು ನೋಡುವಂತೆ, ಆಯೋಜಕರು, ಈ ಕಾರ್ಯಕ್ರಮದ ಬಗ್ಗೆ ಅನೇಕ ರಸ ಪ್ರಶ್ನೆಗಳನ್ನು ಕೇಳುತ್ತಾ, ಕ್ವಿಜ್ ಸ್ಪರ್ಧೆಯನ್ನು ನಡೆಸುತ್ತಾ ಜನರ ತವಕ ಹೆಚ್ಚಾಗುವಂತೆ ಮಾಡಿದ್ದರು.

Continue reading “MYLANG BOOKS- ಓದಿನಲ್ಲಿ ತರುತ್ತಿದೆ ಹೊಸತನ”